Friday, 8 June 2018

ಸಿಲ್ಕ್ ಬೋರ್ಡ್ ಸಿಗ್ನಲ್ !!

ತಿಳಿ ಸಂಜೆ , ಸಮಯ ಸಂಜೆ ಐದಾಗಿದ್ದಿರಬೇಕು ಬಿಟಿಎಂ ಲೇ  ಔಟ್ ನಿಂದ ಮನೆಗೆ ಹೋಗುತ್ತಿರುವಾಗ  ಸಿಲ್ಕ್ ಬೋರ್ಡ್ ಸಿಗ್ನಲ್ ನಲ್ಲಿ ನಿಂತೋನಿಗೆ ಮೊನ್ನೆ ತಾನೆ ನಮ್ ಹುಡ್ಗ  ತ್ರಿಲೋಕ್  ಬರ್ದಿದ್ದ ಡೈರಿಸ್ ಆಫ್ ದಾಳಿ ಪಾಪಣ್ಣ ಓದಿದ್ದು ಇನ್ನು ತಲೇಲಿ ಗುಯ್ಯಂತಿತ್ತು. ಮುಂದೆ ಹೇಗೆ ನಿರೂಪಿಸುತ್ತಾನೋ ಅಂತ ಯೋಚನೆ ಮಾಡ್ತಾ ಇದ್ದೋನಿಗೆ ಎಚ್ಚರ ಆಗಿದ್ದು ಇಡೀ ಸಿಗ್ನಲ್ ಪೂರ್ತಿ ಸ್ತಬ್ಧ ಆಗಿರೋ ಸಿಗ್ನಲ್ ನಲ್ಲಿ ಕಿವಿಲೀ ರಕ್ತ ಬರೋ ಹಾಗೆ ಹಾರ್ನ್ ಕೇಳ್ಸಿದ್ದರಿಂದ, ಹಿಂದೆ ತಿರುಗಿ ನೋಡಿದೆ. ಕಾರ್ ನಲ್ಲಿದ್ದೋವ್ರಿಗೆ ಸುಮಾರು ವಯಸ್ಸು ಮೂವತ್ತರ ಆಸುಪಾಸು, ಕೈನಲ್ಲಿ ಒಂದು ಬೆಳ್ಳಿ ಕಡಗ ಮತ್ತೆ ಹಣೆ ಮೇಲೆ ಕುಂಕುಮ ಜೊತೆಗೆ ಸಿಗ್ನಲ್ ದೀಪಕ್ಕಿಂತ ಸ್ವಲ್ಪ ಹೆಚ್ಚಾಗಿ ಕೆಂಪಾಗಿದ್ದ ಎರಡು ಕಣ್ಣು. (ಗಾಡಿ ಒಡ್ಸಿ ಬಾಡಿ ಹೀಟ್ ಆಗಿದ್ದಿರಬೇಕು).   ಮನಸ್ಸಲ್ಲಿ ಇವ್ನು ಪಕ್ಕ ದಾಳಿ ಪಾಪಣ್ಣನ ಮಗನೇ ಇರ್ಬೇಕು ಅಂದ್ಕೊಂಡು ಮತ್ತೆ ಮುಂದೆ ಬಗ್ಗಿ ಸಿಗ್ನಲ್ ನೋಡಿದ್ರೆ ಇನ್ನು ಕೆಂಪು ದೀಪ ಹತ್ತಿ ಉರಿಯುತ್ತಿತ್ತು. ಕಿಟಕಿ ಗಾಜಿಳಿಸಿ ಮುಂದೆ ಜಾಗ ಇಲ್ಲ ಎಂದು ಸನ್ನೆ ಮಾಡಿದೆ. ಆದ್ರೂ ಕ್ಯಾಬ್ ಡ್ರೈವರ್ ಗಳಿಗೆ ಸಿಲ್ಕ್ ಬೋರ್ಡ್ ಅಪ್ಪನಂತ ಸಿಗ್ನಲ್ ಇದ್ರು ಹೆಂಗಾದ್ರು ಮಾಡಿ ಜಾಗ ಹುಡುಕೋದು ಸಾಮಾನ್ಯ ಜನ ಬಿಡಿಸಲಾರದ ಒಗಟು. ಕಾರನ್ನ ಸ್ವಲ್ಪ ಎಡಕ್ಕೆ ತಿರುಗಿಸಿ ಮತ್ತೊಂದೆರಡು ಬಾರಿ ಹಾರ್ನ್ ಒತ್ತಿ ಜಾಗ ಮಾಡ್ಕೊಂಡು ನಂಗಿಂತ ಸ್ವಲ್ಪ ಮುಂದೆ ತಗೊಂಡೋಗಿ ನಿಲ್ಸೇಬಿಟ್ರು ನಮ್ ಗೌಡ್ರು. ಹಿಂದೆ ಜೋರಾಗಿ ಬರ್ದಿತ್ತು "ಗೌಡ್ರು ಗತ್ತು ದಿಲ್ಲಿಗೂ ಗೊತ್ತು". ಅಯ್ಯೋ ದಿಲ್ಲಿನೆ ಹೆದ್ರುಸಿರೋರ್ಗೆ ಸೈಡ್ ಕೊಡೋಕಾಗ್ಲಿಲ್ವಾಲ್ಲ ಅಂತ ಮನಸಲ್ಲೇ ಬೇಜಾರಾಯ್ತು.   ಇಷ್ಟೆಲ್ಲ ಆದ್ರೂ ಆ ಮನುಷ್ಯ ಹಾರ್ನ್ ಮಾಡೋದನ್ನ ಇನ್ನು ನಿಲ್ಸಿರಲಿಲ್ಲ. ಎಷ್ಟೋ ಜನ ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳೊಕೆ ಅಂತ ಬಂದೋವ್ರು ವಾಪಸ್ ಊರಿಗೆ ಹೋಗೋಕೆ ಸಾಧ್ಯ ಆಗ್ದೆ ಕಾರ್ ತಗೊಂಡ್ರೆ ಫ್ರೀ ಆಗಿ ಕೊಡೋ ಹಾರ್ನ್ ಮೇಲೆ ಸೇಡು ತಿರ್ಸ್ಕೊಳ್ಳೋ ಅಷ್ಟು ಯಾರ್ ಮೇಲು ತೀರ್ಸ್ಕೊಳಲ್ಲ ಅನ್ನಿಸ್ತು.

ದಾಳಿ ಪಾಪಣ್ಣನ ಮಗ ಮಿನಿ ಪಾಪಣ್ಣನ ಮೇಲೆ ಪಾಪ ಅನ್ನಿಸಿ ಬಲ ಬಾಗದ ಮಿರರ್ ಗಮನಿಸಿದೆ. ಸಂಜೆ ಬೇರೆ ಸೋನೆ ಮಳೆ ಉದುರುತ್ತಿತ್ತು,  ಬಹಳ ಖುಷಿಯಿಂದ ನಗು ನಗುತ್ತಾ  ಸ್ಕೂಟಿಯಲ್ಲಿ ಹಿಂದೆಯಿಂದ ತೇವಳಿ ಬರುತ್ತಿದ್ದ ಜೋಡಿಯೊಂದು ನಮ್ಮ ಗೌಡ್ರು ಶಕ್ತಿ ಬಿಟ್ಟು ಒತ್ತುತ್ತಿದ್ದ ಹಾರ್ನಿನ ಅರಿವಾಗಲಿ, ತುಂತುರು ಮಳೆಯ ತೇವವಾಗಲಿ ಎಲ್ಲವನ್ನು ಮರೆತು ಅವರದೇ ಲೋಕದಲ್ಲಿ ಮುಳುಗಿದ್ದಂತೆ ಕಂಡಿತು. ಬಂದವರೇ ನನ್ನ ಗಾಡಿಯ ಮುಂದೆ ನಿಲ್ಲಿಸಿದರು. ಗಾಡಿ ಚಿಕ್ಕದು, ಸೀಟು ಇನ್ನು ಚಿಕ್ಕದು ಅದರಲ್ಲೇ ಇಬ್ಬರು ಕುಳಿತುಕೊಳ್ಳಲು ಕಿತ್ತಾಡುತ್ತ ಸರಸವಾಡುತ್ತಿದ್ದ ಕಂಡು ಬೆರಗಾದೆ. ಇಡೀ ಪ್ರಪಂಚವೇ ಸಿಗ್ನಲ್ ದೀಪ ಹಸಿರಾದರೆ ಸಾಕು ಎಂದು ಕಾಯುತ್ತಿದ್ದರೆ ಈ ಜೋಡಿಗೆ ಮಾತ್ರ ಮತ್ತೆರಡು ನಿಮಿಷ ಪ್ರಪಂಚ ನಿಂತರೆ ಒಳಿತೆಂಬಂತೆ ಸರಸ ಸಲ್ಲಾಪ ಮುಂದುವರೆಸಿದ್ದರು.ಇದೆಲ್ಲ ನೋಡಿ  ಚಿಂತೆ ಇಲ್ಲದವರಿಗೆ ಸಂತೇಲಿ ನಿದ್ದೆ ಬಂತಂತೆ ಇವರಿಬ್ಬರಿಗೆ ಎಂದು ಯೋಚಿಸಿದ ನನ್ನ ದರಿದ್ರ ಅರಸಿಕ ಮನಸ್ಸು ನನ್ನ ಗಮನವನ್ನು ನನ್ನ ಗಾಡಿಯ ಬಲಕ್ಕೆ ಹರಿಸಿತು.

ಮೊನ್ನೆ ತಾನೆ ರಿಲೀಸ್ ಆಗಿರೋ 110cc ಪ್ಯಾಷನ್ ಪ್ರೊ ಗಾಡಿಲಿ ಒಂದು ಮಧ್ಯ ವಯಸ್ಸಿನ ಕುಟುಂಬ ಕುಳಿತಿತ್ತು. (ಅಪ್ಪ ಅಮ್ಮ ಮತ್ತೆರಡು ಮಕ್ಳು )ಎರಡೇ ಗಾಲಿ ಇರೋ ಆ ಗಾಡಿ ಮೇಲೆ ಅಂದಾಜು ಒಂದು ಎತ್ತಿನಗಾಡಿಲಿ ಆಗೋ ಅಷ್ಟು ಸಾಮಾನು ಹೊತ್ಕೊಂಡು ಬೊಮ್ಮನಹಳ್ಳಿ ಕಡೆ ಸಿಗ್ನಲ್ ಹಾಕಿ ಗಾಡಿ ತಿರುಗಿಸಿದ್ದನ್ನ ನೋಡಿದ್ರೆ ಅರ್ಥ ಆಗಿದ್ದು, ಬೆಂಗಳೂರಲ್ಲಿ ಸಾಮಾನು ಕೊಳ್ಳೋದು ದುಬಾರಿ ನೋಡಿ, ಹೆಂಗೂ ಹೊಸದಾಗಿ ತಗೊಂಡಿರೋ ಗಾಡಿ ಇದೆ, ಊರೆಲ್ಲ ಸುತ್ತಾಡ್ಕೊಂಡು ವಾಪಸ್ ಬರ್ಬೇಕಾದ್ರೆ ಕಡಿಮೆ ಬೆಲೆಯಲ್ಲಿ ಸಾಮಾನು ಖರೀದಿ ಮಾಡಿ ಬೆಂಗಳೂರಿಗೆ ಬಂದು ಜೀವನ ಮಾಡೋ ತಯಾರಿಲಿದ್ದಾರೆ ಅಂತ ಅನ್ನಿಸಿದ್ದು ಇಷ್ಟು ವರ್ಷ ಇಂತಹ ಎಷ್ಟೋಂದು ಕುಟುಂಬಗಳ ಪರಿಚಯವಿದ್ದ ಕಾರಣವಿರಬೇಕು. ಹೊಟ್ಟೆಪಾಡು,  ಬೆಂಗ್ಳುರ್ ಜೀವ್ನ ಎಲ್ಲ ನೀಗಿಸ್ಕೊಬೇಕು ಅಂದ್ರೆ ಇದೆಲ್ಲ ಮಾಡೋದು ಅಷ್ಟೇ ಅವಶ್ಯಕವಾಗಿಬಿಟ್ಟಿದೆ. ವ್ಯವಸಾಯ ಮಾಡೋಕೋಗಿ ಕೈ ಸುಟ್ಕೊಂಡು, ಸರ್ಕಾರಗಳ ಬೊಗಳೆ ಆಶ್ವಾಸನೆಗಳಿಂದ ಬೇಸತ್ತು ಬೆಂಗಳೂರಲ್ಲಿ ಬಂದು ಬೇಕರಿಯಲ್ಲಿ ಕೆಲಸ ಮಾಡಿದ್ರು ಪರ್ವಾಗಿಲ್ಲ ಅನ್ನೋರು ಈಗಿನ ಕಾಲದಲ್ಲಿ ಜಾಸ್ತಿ ಆಗಿರೋದನ್ನ ನಾವೆಲ್ಲ ಒಪ್ಪಲೇಬೇಕಾದ ವಿಷಾದದ ಸಂಗತಿ. ಬಂಡವಾಳಶಾಹಿಗಳೂ ರಾಜಕಾರಣಿಗಳೂ ಇದನ್ನೇ ಆಸ್ತಿ ಮಾಡಿಕೊಂಡು ರೈತಾಪಿ ಜನರ ಜೀವನ ಮತ್ತು ವರ್ಚಸ್ಸನ್ನ ಹಾಳುಗೆಡವಿ ಬೆಂಗಳೂರೆಂಬ ಬಣ್ಣದ ನಕಲಿ ಪ್ರಪಂಚ ಸೃಷ್ಟಿಸಿರುವುದು ನನ್ನ ಪಕ್ಕದಲ್ಲೇ ನಿಂತಿದ್ದ ಕುಟುಂಬದ ಆ ಗಂಡಸಿನ ಮುಖದ ಮೇಲೆ ಎದ್ದು ಕಾಣುತ್ತಿತ್ತು.

ಮತ್ತೆ ತಲೆ ಹಾಳಾದಂತಾಗಿ ತಲೆ ತಗ್ಗಿಸಿ ಕುಳಿತು ಎರಡು ನಿಮಿಷ ಮೌನಾಚಾರಣೆ ಮಾಡಿ ಮತ್ತೆ ತಲೆ ಎತ್ತಿದೆ. ಮುಂದೆಯೇ ಒಂದು i10 ಕಾರು ನಿಂತಿತ್ತು. ಬ್ರೇಕ್ ಹಾಕಿದ್ದರಿಂದ ಕಾರಿನ ಹಿಂದಿನ ಪಾರ್ಕಿಂಗ್ ಲೈಟರಡು ಹತ್ತಿದ್ದವು. ಹಿಂದಿನ ಕಿಟಕಿಗಳಿಂದ ಕಾರಿನಲ್ಲಿದ್ದ ಮನುಷ್ಯರು ನೆರಳಿನಂತೆ ಕಾಣುತ್ತಿದ್ದರು. ಕಾರಿನಲ್ಲೊಂದು ಚಿಕ್ಕ ಕುಟುಂಬ ಚೊಕ್ಕ ಕುಟುಂಬ. ದಂಪತಿ ಮತ್ತವರ ಒಂದು ಚಿಕ್ಕ ಮಗು ಆಟವಾಡುತ್ತಿದ್ದಿದು ಕಾಣುತ್ತಿತ್ತು. ನಮ್ಮೂರಲ್ಲಿ ಇಲ್ಲಿ ಸಿಗುವ ಟೆಡ್ಡಿ ಬೇರ್ ದುಡ್ಡಿನಲ್ಲಿ ನಾಲ್ಕೈದು ಸಂಸಾರದ ದಿನದೂಟವೇ ಆಗಿ ಬಿಡುತ್ತದೆನೋ ಅನಿಸುವ ಟೆಡ್ಡಿ ಬೇರ್ ಹಿಡಿದು ಅಪ್ಪನ ತಲೆ ಮೇಲೆ ಬಡಿಯುತ್ತಿದ್ದ ಮಗು ಅತೀವ ಖುಷಿಯಿಂದ ಬೀಗುತ್ತಿದ್ದಿದು ಎದ್ದು ಕಾಣುತ್ತಿತ್ತು. ಅಪ್ಪನೂ ಸ್ವಲ್ಪವೂ ಬೇಜಾರು ಮಾಡಿಕೊಳ್ಳದೆ ಮಗುವಿಗೆ ಫ್ಲೈಯಿಂಗ್ ಕಿಸ್ ಗಳನ್ನ ಹಾರಿಸುತ್ತಿದ್ದಿದು ನೋಡಲು ಅತೀವ ಚೆಂದವೇನೋ ಅನಿಸಿದ್ದು ನಿಜ. ಇಷ್ಟು ಖುಷಿಯಾಗಿರುವ ಗಂಡನ ನೋಡಿ ಹೆಂಡತಿಗೆ ತಡೆಯಲಾಗದೆ ಗಂಡನ ಕೆನ್ನೆಯ ಗಿಂಟಿದ್ದನ್ನು ನೋಡಿ ಕಣ್ಮುಚ್ಚಿದೆ. ಕಾರಲ್ಲಿ ಕಂಡ ತಕ್ಷಣ ಅವರು ಖುಷಿಯಾಗಿರುವವರೆಂದು ತಿಳಿದರೆ ಅದು ಮೂರ್ಖತನವೇ ಸರಿ ಆದರೆ ಆ ಸಕ್ಷಣದಲ್ಲಿ ಅವರ ಖುಷಿ ಮಾತ್ರ ಸತ್ಯಾ ಸತ್ಯದ್ದೇ ಸರಿ.

ಸಿಲ್ಕ್ ಬೋರ್ಡ್ ಸಿಗ್ನಲ್ ಎಂತವರ ಸದ್ದನ್ನು ಸಹ ಕಿತ್ತುಕೊಳ್ಳುವುದು ಸಹಜ, ದಿಲ್ಲಿಯನ್ನೇ ನಡುಗಿಸಿರೋ ಗೌಡರು ಕೂಡ ಸಿಲ್ಕ್ ಬೋರ್ಡ್ ಸಿಗ್ನಲ್ ನ ಕೆಂಪು ದೀಪದ ತಾಳ್ಮೆಗೆ ತಗ್ಗಿ ತಣ್ಣಗಾಗಿದ್ದರು.  ಎಂತವರು ಬಂದರೂ ಈ ಸಿಗ್ನಲ್ ಗೆ ಬೆಲೆ ಕೊಡಬೇಕೆಂಬುದು ಅಲಿಖಿತ ಶಾಸನ. ಮತ್ತೆರಡು ನಿಮಿಷದ ನಂತರ ಸಿಗ್ನಲ್ ಹಸಿರಾಗಿದ್ದು ಕಾಣಿಸಿತು. ಸ್ಮಶಾನ ಮೌನದಂತಿದ್ದ ಸಿಲ್ಕ್ ಬೋರ್ಡ್ ಇದ್ದಕಿದ್ದಂತೆ ಹಾರ್ನ್ ಗಳಿಂದ ಹತ್ತಿ ಉರಿದಿದ್ದನ್ನ ಕಂಡು ಬೆರಗಾಗಿ ಬ್ರೇಕ್ ಇಳಿಸಿ ಕ್ಲಚ್ ತುಳಿದು ಆಕ್ಸಿಲರೇಟರ್ ಒತ್ತಿದೆ. ಹೀಗೆ ಬೆಂಗಳೂರು ನಾನಾ ಕಾರಣಗಳಿಂದ ನಾನಾ ಜನರನ್ನ ತನ್ನ ಹೊಟ್ಟೆಯೊಳಗಾಕಿಕೊಂಡು ಸಾಕುತ್ತಿದೆ ಹಾಗೆಯೇ ಸಿಲ್ಕ್ ಬೋರ್ಡಿನಂತಹ ಸಿಗ್ನಲ್ ಗಳು ನಾನಾ ಜನರ ನೂರಾರು ಕಥೆಗಳನ್ನ ಕೂಗಿ ಹೇಳುತ್ತಿವೆ. ಇದೊಂದು ಮುಗಿಯದ ಕಥೆ, ನನ್ನಂತೆಯೇ ಮತ್ತೊಬ್ಬ ಕಥೆಗಾರ ನನ್ನ ವ್ಯತೆಯನ್ನ ಎಲ್ಲಿ ಕಥೆಯಾಗಿಸಿರುವನೋ ಎಂದು ಬಗೆಯುತ್ತಾ ಸದ್ಯಕ್ಕಿಲ್ಲಿಗೀಕಥೆ ಮುಗಿಸುವೆ. ಮತ್ತೆ ಸಿಗೋಣ !!

- ಪುಟ್ಟರಾಧ್ಯ ಸಿದ್ದರಾಜ್

No comments:

Post a Comment